ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತ ಕನ್ನಡ ಸಂಘಕ್ಕೆ ಬಹಿರಂಗ ಪತ್ರ
ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತ ಕನ್ನಡ ಸಂಘದ ಗಮನಕ್ಕೆ
ಬೆಂಗಳೂರಿನ ಕೊಂಕಣಿ ಕ್ರೈಸ್ತರ ಮೂಲಭೂತ ಹಕ್ಕನ್ನು ನಿರಾಕರಿಸಬೇಡಿ
ಮೇಲಿನ ಸಂಘದಿಂದ ಬೆಂಗಳೂರಿನ ರಾಮಮೂರ್ತಿನಗರದ ಪವಿತ್ರ ಕುಟುಂಬದ ದೇವಾಲಯದ ಧರ್ಮಗುರುಗಳಿಗೆ ಮೇ 30ರಂದು ಬರೆದ ಪತ್ರ ನೋಡಿದೆ. ಅಜ್ಞಾನ ಮತ್ತು ದುರಹಂಕಾರದಿಂದ ಬರೆದ ಆ ಪತ್ರಕ್ಕೆ ಉತ್ತರವಾಗಿ ಈ ಬಹಿರಂಗ ಪತ್ರವನ್ನು ಬರೆದಿದ್ದೇನೆ.
ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತ ಕನ್ನಡ ಸಂಘದ ಪದಾಧಿಕಾರಿಗಳೇ, ನಿಮ್ಮ ಸದ್ರಿ ಪತ್ರವು ಅಕ್ಷಮ್ಯವಾಗಿದ್ದು ನಿಮ್ಮ ವರ್ತನೆ ಅತಿರೇಕತನದ್ದಾಗಿದೆ. ಉಲ್ಲೇಖಿಸಿರುವ ಚರ್ಚಿನಲ್ಲಿ ಜೂನ್ 15ರಿಂದ ಪ್ರಾರಂಭವಾಗಬೇಕಿದ್ದ ಕೊಂಕಣಿ ಪೂಜೆಗೆ ನೀವು ವಿರೋಧಿಸಿದ್ದೇ ಅಲ್ಲದೆ ಧಮ್ಕಿಯನ್ನೂ ಹಾಕಿದ್ದೀರಿ. ನಿಮ್ಮ ಬೆದರಿಕೆಗೆ ಮಣಿದ ಧರ್ಮಗುರುಗಳು ಕೊಂಕಣಿ ಪೂಜೆ ಆರಂಭಿಸುವುದನ್ನು ರದ್ದುಪಡಿಸಿದ್ದಾರೆಂದು ತಿಳಿದು ಬಂದಿದೆ.
ಇದು ಖಂಡನೀಯ ಮಾತ್ರವಲ್ಲ ಸರ್ವಥಾ ನಡೆಯಬಾರದಿದ್ದ ಬೆಳವಣಿಗೆ. ಇದು ಸಂವಿಧಾನ ವಿರೋಧಿಯೂ ಧರ್ಮ ವಿರೋಧಿಯೂ ಹೌದು.
ಸ್ನೇಹಿತರೇ, ನಿಮ್ಮ ಪತ್ರದಲ್ಲಿರುವ ಮೂರ್ಖ ಮತ್ತು ಅಪ್ರಬುದ್ಧ ಅಂಶಗಳಿಗೆ ಸೂಕ್ತ ಉತ್ತರ ನೀಡಲೇಬೇಕಾಗಿದೆ. ಆದುದರಿಂದ, ದಯವಿಟ್ಟು, ಕೆಳಗಿನ ಅಂಶಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕಾಗಿ ವಿನಂತಿ.
1. ಕೊಂಕಣಿ ಭಾಷೆಯಲ್ಲಿ ಪ್ರತ್ಯೇಕ ಪೂಜೆಯ ಅಗತ್ಯ ಇದೆಯೇ ಎಂದು ಕೇಳಿದ್ದೀರಿ! ನಿಮಗೂ ಒಂದು ಪ್ರಶ್ನೆ – ‘ಕನ್ನಡ ಭಾಷೆಯಲ್ಲಿ ಪೂಜೆಯ ಅಗತ್ಯವೇಕೆ?’ – ಇದಕ್ಕೇನನ್ನುತ್ತೀರಿ? ಅದು ನಿಮ್ಮ ಹಕ್ಕು, ಅಲ್ಲವೇ? ಅದೇ ರೀತಿ ಕೊಂಕಣಿ ಜನರಿಗೆ ಕೊಂಕಣಿ ಪೂಜೆ ಅವರ ಹಕ್ಕು. ಅಷ್ಟೇ.
ನಿಮಗೆ ತಿಳಿದಿದೆಯೋ ಗೊತ್ತಿಲ್ಲ, ಹಿಂದೆ ಪ್ರಪಂಚದಾದ್ಯಂತ ಕೇವಲ ಲ್ಯಾಟಿನ್ನಲ್ಲಷ್ಟೇ ಪೂಜೆ-ಪ್ರಾರ್ಥನೆ ನಡೆಯುತ್ತಿತ್ತು. 1965ರ ಎರಡನೇ ವ್ಯಾಟಿಕನ್ ಸಭೆಯು ಸ್ಥಳೀಯ/ಪ್ರಾದೇಶಿಕ ಭಾಷೆಗಳಲ್ಲಿ, ಅಂದರೆ ಜನರ ಮಾತೃಭಾಷೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅವಕಾಶ ಕೊಟ್ಟಿತು. ಅದರ ನಂತರವಷ್ಟೇ ಎಲ್ಲೆಡೆ ಅವರವರ ಭಾಷೆಗಳಲ್ಲಿ ಪೂಜೆ ಪ್ರಾರಂಭವಾಗಿದ್ದು.
ಅಂದಿನಿಂದ ಭಾರತೀಯ ಭಾಷೆಗಳಲ್ಲಿ, ಚರ್ಚುಗಳಲ್ಲಿ, ಪೂಜೆ ಶುರುವಾಗಿದ್ದು. ಹಾಗಾಗಿ ಕನ್ನಡ, ಕೊಂಕಣಿ, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ದೇಶೀಯ ಭಾಷೆಗಳಲ್ಲಿ ಜನರಿಗೆ ಪೂಜೆ ದೊರಕಿತು.
2. ಕೊಂಕಣಿ ಭಾರತದ ರಾಷ್ಟ್ರ ಭಾಷೆ
ಕೆನರಾ-ಕರಾವಳಿ ಮೂಲದ ಕೊಂಕಣಿ ಕ್ರೈಸ್ತರ ಜನಾಂಗ ಬಹಳ ದೊಡ್ಡದಿದೆ. ರಾಜ್ಯ, ದೇಶ ಮತ್ತು ಪ್ರಪಂಚದಾದ್ಯಂತ ಕೊಂಕಣಿ ಕ್ರೈಸ್ತರು ನೆಲೆಸಿದ್ದಾರೆ. ಮಂಗಳೂರು, ಉಡುಪಿ ಮತ್ತು ಕಾರವಾರ ಧರ್ಮಪ್ರಾಂತ್ಯಗಳಲ್ಲಿ ಎಲ್ಲವೂ ಕೊಂಕಣಿಯಲ್ಲಿಯೇ ನೆರವೇರುತ್ತದೆ. ಯಾಕೆಂದರೆ ಇಲ್ಲಿನ ಎಲ್ಲಾ ಕ್ರೈಸ್ತರು ಕೊಂಕಣಿಗರು. ಕೊಂಕಣಿ ಕ್ರೈಸ್ತರು ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಕಡೆಯೂ ಇದ್ದಾರೆ. ದುರದೃಶ್ಟವಶಾತ್ 50%ದಿಂದ 98% ಕೊಂಕಣಿ ಕ್ರೈಸ್ತರಿರುವ ಹಲವಾರು ಚರ್ಚುಗಳಿದ್ದರೂ ಕರಾವಳಿ ಹೊರತು ಬೇರೆ ಡಯಾಸಿಸ್ಗಳಲ್ಲಿ ಕೊಂಕಣಿ ಪೂಜೆಗೆ ಅವಕಾಶ ನೀಡದೇ ಹೋಗಿದ್ದರಿಂದ ಇಷ್ಟು ದಶಕಗಳ ಕಾಲ ಕೊಂಕಣಿ ಕ್ರೈಸ್ತರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದರು.
ತಮ್ಮ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದ ಕ್ರೈಸರಲ್ಲಿ ಅನೇಕರು ಈ ನಿಟ್ಟಿನಲ್ಲಿ ಜಾಗೃತರಾಗಿ, ಕಾರ್ಯಪ್ರವೃತ್ತರಾಗಿದ್ದರಿಂದ ಕಳೆದ ಕೆಲವು ವರ್ಷಗಳಿಂದ ರಾಜ್ಯದ ಅಲ್ಲಲ್ಲಿ ಕೊಂಕಣಿಗರಿಗೆ ಕೊಂಕಣಿಯಲ್ಲಿಯೇ ಪೂಜೆಗೆ ಅವಕಾಶಗಳು ದೊರಕುತ್ತಾ ಬಂದಿದೆ. ಬೆಂಗಳೂರು ಧರ್ಮಪ್ರಾಂತ್ಯದಲ್ಲಿಯೂ ಹಲವು ಚರ್ಚ್ಗಳಲ್ಲಿ ಕೊಂಕಣಿ ಪೂಜೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟವೂ ನಡೆದಿದೆ.
ಕೊಂಕಣಿಯು ಭಾರತದ 22 ರಾಷ್ಟ್ರೀಯ ಭಾಷೆಗಳಲ್ಲಿ ಒಂದು. ಗೋವಾ ರಾಜ್ಯದ ರಾಜ್ಯ ಭಾಷೆಯೂ ಆಗಿದೆ. ರಾಷ್ಟ್ರದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡೆದಿರುವ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸ್ಥಾನ ಪಡೆದಿರುವ ಭಾಷೆಯೂ ಆಗಿದೆ. ರಾಜ್ಯದಲ್ಲಿಯೂ ಕೊಂಕಣಿ ನಾಡಿನ ಪ್ರಬಲ ಸಹೋದರ ಭಾಷೆ. ಅದರಿಂದಾಗಿಯೇ ರಾಜ್ಯ ಸರ್ಕಾರದಿಂದ 31 ವರ್ಷಗಳ ಹಿಂದೆಯೇ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಲ್ಪಟ್ಟಿದೆ.
ನಮ್ಮದು ಪ್ರಜಾಪ್ರಭುತ್ವ ದೇಶ. ನೀವು ಯಾವ ಆಧಾರದಲ್ಲಿ ಮತ್ತು ಯಾವ ಉದ್ದೇಶದಿಂದ ಕೊಂಕಣಿ ಪೂಜೆಗೆ ವಿರೋಧಿಸುತ್ತೀದ್ದೀರಿ? ಕೊಂಕಣಿ ಜನರಿಗೆ ಕೊಂಕಣಿಯಲ್ಲಿ ಪೂಜೆ ದೊರೆತರೆ ನಿಮಗ್ಯಾಕೆ ಹೊಟ್ಟೆ ಉರಿ? ಅಥವಾ ನಿಮಗೇನು ನಷ್ಟ? ದಯವಿಟ್ಟು ಸ್ಪಷ್ಟಪಡಿಸಿ.
ಕೊಂಕಣಿ ಪೂಜೆಗೆ ವಿರೋಧಿಸುವ ನೀವು, ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡ ಹೊರತು ಬೇರೆ ಭಾಷೆಗಳಲ್ಲಿ ಪೂಜೆ ನಡೆಯುತ್ತದೆಯಲ್ವೇ, ಅದನ್ನು ಯಾಕೆ ವಿರೋಧಿಸಿಲ್ಲ? ಇಂಗ್ಲಿಷ್ ಸೇರಿದಂತೆ, ತಮಿಳು, ತೆಲುಗು ಇನ್ನಿತರ ಭಾಷೆಗಳಲ್ಲಿಯೂ ನಡೆಯುವ ಪೂಜೆಗಳನ್ನು ಯಾಕೆ ನೀವು ತಡೆದಿಲ್ಲ? ಹೇಳುತ್ತೀರಾ?
ಹೇಗೆ ನಿಮಗೆ ನಿಮ್ಮ ಮಾತೃಭಾಷೆ ಕನ್ನಡದಲ್ಲಿ ಪೂಜೆ ಇದೆಯೋ ಮತ್ತು ಬೇಕಾಗಿದೆಯೋ ಹಾಗೆಯೇ ಕೊಂಕಣಿ ಕ್ರೈಸ್ತರಿಗೆ ಅವರ ಮಾತೃಭಾಷೆಯಲ್ಲಿ ಪೂಜೆ ಬೇಕಾಗಿದೆ. ಅವರೇನಾದರೂ ಕೊಂಕಣಿಯಲ್ಲಿ ಮಾತ್ರ ದಿನಾಲೂ ಪೂಜೆ ಇರಬೇಕೆಂದು ಕೇಳಿದ್ದರಷ್ಟೇ ಯಾರಾದರೂ ವಿರೋಧಿಸಬೇಕು. ಅವರು ತಮ್ಮ ಸಹಜ ಹಕ್ಕನ್ನು ಕೇಳಿದ್ದಾರೆಯೇ ಹೊರತು ಇತರರ ಹಕ್ಕನ್ನು ಕಸಿಯುವ ಹುನ್ನಾರ ನಡೆಸಿಲ್ಲ. ಅಂತಹ ಹುನ್ನಾರ ಮತ್ತು ದುಷ್ಟತನವನ್ನು ಮಾಡುತ್ತಿರುವುದು ನೀವೇ ಹೊರತು ಕೊಂಕಣಿ ಕ್ರೈಸ್ತರಲ್ಲ.
ಈ ಕೂಡಲೇ ಕೊಂಕಣಿ ಭಾಷೆ ಮತ್ತು ಅದನ್ನಾಡುವ ಜನರಿಗೆ ವಿರೋಧ ಮಾಡುವುದನ್ನು ಬಿಟ್ಟು ಬಿಡಿ. ನಿಮ್ಮ ಮನಸ್ಸಿನಲ್ಲಿನ ಕೊಳೆ ಮತ್ತು ದುರಹಂಕಾರವನ್ನು ಸ್ವಚ್ಛಗೊಳಿಸಿ.
2. ಕೊಂಕಣಿ ಜನರು ಕನ್ನಡಿಗರೂ ಹೌದು
ಕೊಂಕಣಿ ಜನರು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದಾರೆಯೇ ಹೊರತು ಹೊರಗಿನವರಲ್ಲ. ಶತಮಾನಗಳಿಂದ ನಾವು ಇಲ್ಲಿನವರು. ಇದೇ ಮಣ್ಣಿನ ಜನರು ನಾವು. ನಮಗೆ ಕೊಂಕಣಿಯೂ ಕನ್ನಡವೂ ಒಂದೇ. ಕೊಂಕಣಿ ನಮ್ಮ ಮಾತೃಭಾಷೆಯಾಗಿ ಎಷ್ಟು ಮಹತ್ವದ್ದೋ ಕನ್ನಡವೂ ಅಷ್ಟೇ ಮಹತ್ವವುಳ್ಳದ್ದು. ಬಹು ಭಾಷೆ ಎಂಬುದು ಭಾರತದ ವಿಶಿಷ್ಟತೆ. ನಾವು ಕರ್ನಾಟಕದ ನಾಗರಿಕರು, ಕನ್ನಡ ನಾಡಿನ ಜನರು. ನಾವು ಕೊಂಕಣಿಗರೂ ಹೌದು ಕನ್ನಡಿಗರೂ ಹೌದು. ಇದನ್ನೆಲ್ಲಾ ತಿಳಿಯದ ನಿಮ್ಮಂತಹ ಬುದ್ಧಿಗೇಡಿಗಳಿಂದ ನಮಗೆ ಪಾಠ ಕಲಿಯುವ ಅವಶ್ಯಕತೆಯಿಲ್ಲ, ತಿಳಿಯಿತೇ?
‘ಕನ್ನಡ ಬಾರದ ಕೊಂಕಣಿಗನ್ಯಾರು?’ ಎಂದು ಕೇಳಿದ್ದೀರಿ. ನಿಮಗೇಕೆ ಅದರ ಉಸಾಬರಿ? ಯಾರಾದನೊಬ್ಬ ಕೊಂಕಣಿಗನಿಗೆ ಕನ್ನಡ ಬಾರದೇ ಇದ್ದರೂ ನಿಮಗೇನು ಸಮಸ್ಯೆ? ಕೊಂಕಣಿಗರು ಯಾವತ್ತೂ ಕನ್ನಡಿಗರೇ ಆಗಿದ್ದಾರೆಯೇ ಹೊರತು ಎಂದಿಗೂ ಕನ್ನಡಕ್ಕೆ ವಿರೋಧಿಗಳಲ್ಲ. ನಿಮಗೆ ಅಷ್ಟು ಧೈರ್ಯವಿದ್ದರೆ, ತಮಿಳು ಮತ್ತು ಇತರ ಭಾಷೆಯ ಕ್ರೈಸ್ತರನ್ನೂ ಹೀಗೆಯೇ ಕೇಳುತ್ತೀರಾ? ನಿಮ್ಮ ಉದ್ಧಟತನ ಅತಿಯಾಯಿತು.
ಭಾಷೆಯ ಹೆಸರಿನಲ್ಲಿ ಕ್ರೈಸ್ತರಲ್ಲಿ ಬಿರುಕು ಮೂಡಿಸುವ ನಿಮ್ಮ ಹುನ್ನಾರ ನಿಲ್ಲಿಸಿರಿ. ಬೆಂಗಳೂರಿನ ಕ್ರೈಸ್ತರಲ್ಲಿ ಒಡಕು, ವಿರಸ ಮತ್ತು ವೈಮನಸ್ಯ ಹುಟ್ಟಿಸುವ ನೀಚ ಕೆಲಸವನ್ನು ನೀವು ಮಾಡುತ್ತಿದ್ದೀರಿ. ದಯವಿಟ್ಟು ಅದನ್ನು ತಕ್ಷಣ ನಿಲ್ಲಿಸಿ.
3. ಸಮುದಾಯವನ್ನು ವಿಭಜಿಸುವ ಹುನ್ನಾರ ನಿಮ್ಮದೇ
ಕೊಂಕಣಿ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧರ್ಮಗುರುಗಳಿಗೆ ‘ಒಗ್ಗಟ್ಟಾಗಿರುವ ಕ್ರೈಸ್ತ ಸಮುದಾಯವನ್ನು ವಿಂಗಡಿಸುವ ವಿಭಜಿಸುವ ನೀಚ ಹುನ್ನಾರ ನಿಮ್ಮದು’ ಎಂದು ಧಿಕ್ಕಾರ ಕೂಗುತ್ತಿದ್ದೀರಲ್ಲಾ, ನಿಮಗೇನು ತಲೆಗೆ ಮದವೇರಿದೆಯೇ? ಹೇಗೆ ಕನ್ನಡಿಗರಿಗೆ ಕನ್ನಡದಲ್ಲಿ, ತಮಿಳರಿಗೆ ತಮಿಳಿನಲ್ಲಿ ಪೂಜೆ ಇದೆಯೋ ಕೊಂಕಣಿಗರಿಗೂ ಕೊಂಕಣಿಯಲ್ಲಿ ಪೂಜೆ ಸ್ವಾಭಾವಿಕ, ಪ್ರಜಾಸತ್ತಾತ್ಮಕ ಮತ್ತು ಶಾಸನಾತ್ಮಕವೂ ಹೌದು. (ಪೋಪ್ ಅವರೇ ಆದೇಶ ನೀಡಿದ ಮೇಲೆ ಅದು ಶಾಸನಾತ್ಮಕ).
‘ಕನ್ನಡಿಗರ ಏಕತೆಗೂ ಐಕ್ಯತೆಗೂ ಧಕ್ಕೆ’ ಎಂದಿದ್ದೀರಿ. ಇದು ನೀವೆಷ್ಟು ಅಲ್ಪರು, ನೀಚರು ಮತ್ತು ಮತಿಗೆಟ್ಟವರು ಎಂಬುದನ್ನಷ್ಟೇ ಸೂಚಿಸುತ್ತದೆ. ಸ್ವತಃ ಕನ್ನಡಿಗರೂ ಆಗಿರುವ ಕೊಂಕಣಿ ಕ್ರೈಸ್ತರು ಕನ್ನಡದ ಬಗ್ಗೆ ಅಕ್ಷೇಪವನ್ನೇ ಎತ್ತಿಲ್ಲ. ವಿರೋಧವನ್ನೂ ಮಾಡಿಲ್ಲ. ಹಾಗಿರುವಾಗ ಹೀಗೆ ಹುಚ್ಚುಚ್ಚಾಗಿ ಯಾಕೆ ಹೇಳಿಕೆ ಕೊಡುತ್ತಿದ್ದೀರಿ? Letterhead ಇದೆಯೆಂದು ಯದ್ವಾತದ್ವಾ ಹೇಳಿಕೆ ನೀಡುವ, ಸುಳ್ಳು ಆರೋಪಗಳನ್ನು ಹೊರಿಸುವ ಚಪಲವೇ ನಿಮಗೆ?
ಕೊಂಕಣಿ ಕ್ರೈಸ್ತರು ಇತರ ಅಥವಾ ಕನ್ನಡ ಭಾಷೆಯ ಪೂಜೆ ರದ್ದು ಮಾಡಿ ಕೊಂಕಣಿ ಪೂಜೆಗೆ ಅವಕಾಶ ಕೇಳಿಲ್ಲವಲ್ಲ. ಮತ್ಯಾಕೆ ನಿಮ್ಮ ವಿರೋಧ? ಯಾವ ಆಧಾರ ಮತ್ತು ಕಾರಣದಿಂದ ನಿಮ್ಮ ವಿರೋಧ ಮತ್ತು ಪ್ರತಿಭಟನೆ ಎನ್ನುವುದನ್ನು ತಿಳಿಯಪಡಿಸಿ. ನಿಮ್ಮ ಅಪಸ್ವರವನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತೀರಿ?
4. ‘ಕೊಂಕಣಿ ಪೂಜೆಯಿಂದ ವಿಶ್ವಾಸ ಪ್ರೀತಿ ಭಕ್ತಿಗೆ ಮಾರಕ’ ಎಂದಿದ್ದೀರಿ. ಇದು ನಿಮ್ಮ ಮಾನಸಿಕ ಅಸ್ವಸ್ಥತೆಯನ್ನೂ ಮೂರ್ಖತನವನ್ನೂ ಸಾಬೀತುಪಡಿಸುತ್ತದೆ. ನಿಮ್ಮ ವಿಚಾರ ದೌರ್ಬಲ್ಯ ಮತ್ತು ಸಂಕುಚಿತ ಮನಸ್ಸನ್ನು ಇದು ದೃಢೀಕರಿಸುತ್ತದೆ. ಕೊಂಕಣಿ ಕ್ರೈಸ್ತರು ಭಕ್ತರೂ, ಕ್ರೈಸ್ತ ಧರ್ಮವನ್ನು ಪ್ರೀತಿಸುವವರೂ ದೇವರಲ್ಲಿ ವಿಶ್ವಾಸ ಇಟ್ಟವರೂ ಆಗಿರುವಾಗ ಯಾರ ವಿಶ್ವಾಸ ಪ್ರೀತಿ ಭಕ್ತಿಗೆ ಮಾರಕವಾಗುತ್ತಾರೆ ಮಾರಾಯ್ರೇ? ನಿಮಗೆ ತಲೆ ಕೆಟ್ಟಿದೆಯೆಂದು ವಾಚಾಮಗೋಚರವಾಗಿ ಪ್ರಲಾಪಿಸುತ್ತೀರಲ್ಲಾ? ಹುಚ್ಚರಂತೆ ಇತರರನ್ನು ಯಾಕೆ ಹೀಗಳೆಯುತ್ತೀರಿ? ಚರ್ಚಿನ ಸದಸ್ಯರು, ಕ್ರೈಸ್ತ ಭಕ್ತಾದಿಗಳು ಚರ್ಚಿನಲ್ಲಿ ಪೂಜೆ ಮಾಡುವುದು ನಿಮಗೆ ‘ಮಾರಕ’ ಎಂಬುದಾಗಿ ಕಾಣುತ್ತದೆಯಾದರೆ ನಿಮ್ಮ ಮಾನಸಿಕ ಆರೋಗ್ಯದಲ್ಲಿ ಸಮಸ್ಯೆ ಇರುವಂತೆ ಕಾಣುತ್ತದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ನಿಮ್ಮ ಅಧಃಪತನಕ್ಕೀಡಾದ ಚಿಂತನಾಶಕ್ತಿಗೆ ಚಿಕಿತ್ಸೆ ಪಡೆದುಕೊಳ್ಳಿ.
5. ‘ಆರ್ಥಿಕ ಲಾಭ, ಆಧ್ಯಾತ್ಮಿಕ ನಷ್ಟ’ದ ಕುರಿತು ಹೇಳಿದ್ದೀರಿ. ಧಾರ್ಮಿಕತೆ ಮತ್ತು ಭಕ್ತಿ ನಿಮಗೆ ಆರ್ಥಿಕ ವ್ಯವಹಾರದಂತೆ ಗೋಚರಿಸುತ್ತದೆ ಎಂದಾಯಿತು! ನೀವೇನು ಹಣಕಾಸಿನ ವ್ಯವಹಾರಸ್ಥರೇ? ಗೂಂಡಾಗಳಂತೆ ವರ್ತಿಸುವ ನಿಮಗೆ ಆಧ್ಯಾತ್ಮಿಕತೆಯ ಗಂಧಗಾಳಿಯೂ ಇಲ್ಲ. ನಿಮ್ಮ ಹೇಳಿಕೆ, ಆರೋಪಗಳಿಂದ ಅದು ರುಜುವಾತಾಗಿದೆ. ಅಷ್ಟೇ. ಪ್ರಾಮಾಣಿಕ ಕ್ರೈಸ್ತ ಭಕ್ತರಾದ ಕೊಂಕಣಿಗರನ್ನು ರೋಗಗ್ರಸ್ತ ಮನಸ್ಸಿನಿಂದಲೂ ಕಾಮಾಲೆ ಕಣ್ಣಿನಿಂದಲೂ ನೋಡುವುದನ್ನು ಬಿಟ್ಟು ಬಿಡಿ.
6. ‘ವಿಭಜಿಸಿ ಆಳುವ ನೀತಿ’ ಮತ್ತು ‘ನಾಡಿನ ಅಸ್ಮಿತೆಗೆ ಕೊಳ್ಳಿ’ ಎಂದೆಲ್ಲಾ ಊಳಿಟ್ಟಿದ್ದೀರಿ. ನಿಮ್ಮ ದುರಹಂಕಾರ ಅತಿಯಾಯಿತು. ಭಾಷೆಯ ಮತಾಂಧತೆಯನ್ನು ಪ್ರಯೋಗಿಸಿ ಕ್ರೈಸ್ತರನ್ನು ವಿಭಜಿಸುತ್ತಿರುವವರು ನೀವೇ. ನಾಡಿನ ಅಸ್ಮಿತೆಗೆ ಕೊಳ್ಳಿ ಇಡುತ್ತಿರುವುದೂ ನೀವೇ. ಸ್ವಭಾವತಃ ಶಾಂತಿಪ್ರಿಯರಾದ, ಸರಳ ವ್ಯಕ್ತಿತ್ವದ ಕೊಂಕಣಿ ಕ್ರೈಸ್ತರನ್ನು ಭಯೋತ್ಪಾದಕರಂತೆ ನೋಡುತ್ತಿರುವ ನಿಮಗೆ ದೃಷ್ಟಿ ವೈಕಲ್ಯವಿರುವುದು ಸ್ಪಷ್ಟ. ನಿಮ್ಮ ಮನೋರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳಿ, ಪ್ಲೀಸ್.
7. ‘ಧರ್ಮದ ಹೆಸರಿನಲ್ಲಿ ಭಾಷಾ ರಾಜಕೀಯ ಸಲ್ಲದು’ ಎಂದು ಉಪದೇಶ ಬೇರೆ ನೀಡಿದ್ದೀರಿ. ಧಾರ್ಮಿಕ ಸಂಗತಿಗಳಲ್ಲಿ ರಾಜಕೀಯವಷ್ಟೇ ಅಲ್ಲ ಗೂಂಡಾಗಿರಿ ಮಾಡುತ್ತಿರುವುದೇ ನೀವು. ಇತರರಿಗೆ ರಗಳೆ ನೀಡದ, ಕೇಡನ್ನು ಬಯಸದ ಕೊಂಕಣಿ ಕ್ರೈಸ್ತರ ವಿರುದ್ಧ ಷಡ್ಯಂತ್ರ ರೂಪಿಸಿರುವುದು ನೀವೇ. ನೀವು ಕೈಕೊಂಡಿರುವ ಅಕ್ರಮ, ನೀಚ, ಅನೈತಿಕ ಕಾರ್ಯಗಳನ್ನು ಇತರರ ಮೇಲೆ ಆರೋಪಿಸಬೇಡಿ.
8. ನಿಮ್ಮ ಭಾಷಾ ಪ್ರಯೋಗ ಮತ್ತು ಬೆದರಿಕೆಯ ಮಾತುಗಳನ್ನು ಓದುವಾಗ ನೀವು ಕ್ರೈಸ್ತರಲ್ಲ, ಬದಲಾಗಿ ಭಯೋತ್ಪಾದಕರಂತೆ ಕಾಣುತ್ತದೆ. ಕ್ರೈಸ್ತರ ಮುಖವಾಡದಲ್ಲಿರುವ ರೌಡಿಗಳು ನೀವೆಂಬಂತೆ ತೋರುತ್ತದೆ. ಶಾಂತಿ, ಸೌಹಾರ್ದತೆ ಮತ್ತು ಸಭ್ಯತೆಗೆ ಹೆಸರುವಾಸಿಯಾಗಿರುವ ಕೊಂಕಣಿ ಕ್ರೈಸ್ತರನ್ನು ಶತ್ರುಗಳೆಂಬಂತೆ ಬಿಂಬಿಸಿ, ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದೀರಿ. ಅಹಿತಕರ ಘಟನೆ ನಡೆಸಲು ಹುನ್ನಾರ ನಿಮ್ಮಲ್ಲಿರುವುದು ನಿಮ್ಮ ಮಾತುಗಳಿಂದ ಗೋಚರವಾಗುತ್ತದೆ. ಇಲ್ಲದ ಸಮಸ್ಯೆಗಳನ್ನು ಕಲ್ಪಿಸಿ, ಸುಳ್ಳು ಆರೋಪಗಳನ್ನು ಹೇರಿ ಗೊಂದಲ ಮತ್ತು ಗಲಾಟೆ ಉಂಟಾಗಿಸುವುದು ನಿಮ್ಮ ಅಪೇಕ್ಷೆಯೆಂಬಂತೆ ಕಾಣುತ್ತದೆ. ನೀವು ನಿಜವಾಗಿಯೂ ಒಳ್ಳೆಯ ಕ್ರೈಸ್ತರೇ ಆಗಿದ್ದರೆ, ಇಂತಹ ಕೀಳು ಮಾತು ಮತ್ತು ಕೃತ್ಯಗಳನ್ನು ತ್ಯಜಿಸಿ.
ಸಾಂವಿಧಾನಿಕ ಮೂಲಭೂತ ಹಕ್ಕು – ತಡೆಯಲು ನೀವ್ಯಾರು?
ಕೊಂಕಣಿ ಕಥೋಲಿಕ ಕ್ರೈಸ್ತರಿಗೆ ಕೊಂಕಣಿಯಲ್ಲಿಯೇ ಪೂಜೆಯ ವ್ಯವಸ್ಥೆ ದೊರಕಿಸಲು ಪೋಪ್ ನೇತೃತ್ವದ ವ್ಯಾಟಿಕನ್ನಿಂದಲೇ ಆದೇಶ ಇದೆ. ಅಲ್ಲದೇ ಈ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಕೋರ್ಟ್ಗಳು ಮತ್ತು ಉಚ್ಚ ನ್ಯಾಯಾಲಯವೂ ಆದೇಶ ನೀಡಿದೆ. ಭಾರತದ ಸಂವಿಧಾನವೂ ಸಮಾನ ಹಕ್ಕನ್ನು ಎಲ್ಲರಿಗೂ ನೀಡಿದೆ. ಅದಕ್ಕೆ ಅರ್ಹರಿರುವ ಕೊಂಕಣಿ ಕ್ರೈಸ್ತರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇಷ್ಟೆಲ್ಲಾ ಇರುವಾಗ ಕೊಂಕಣಿ ಕ್ರೈಸ್ತರಿಗೆ ದೊರಕಬೇಕಾದ ಅರ್ಹ, ನೈಜ ಮತ್ತು ಕಾನೂನುಬದ್ಧ ಹಕ್ಕನ್ನು ತಡೆಯಲು, ನಿರಾಕರಿಸಲು ನೀವ್ಯಾರು ಮತ್ತು ನಿಮಗೆ ಆ ಅಧಿಕಾರ ನೀಡಿದವರು ಯಾರು? ನಮ್ಮ ಜನರು ತಮ್ಮ ಹಕ್ಕು ಕೇಳುವಾಗ ಅದನ್ನು ತಡೆಯಲು ಹೋರಾಡುವ ನೀವು ಯಾವ ಸೀಮೆ ದೊಣೆನಾಯಕರು?
ಕ್ರೈಸ್ತರೆಂದು ಹೇಳಿಕೊಳ್ಳುವ ನೀವು ನಮ್ಮ ಜಗದ್ಗುರುಗಳಾದ ಪೋಪ್ ಅವರನ್ನೂ, ವ್ಯಾಟಿಕನ್ ಚರ್ಚನ್ನೂ ವಿರೋಧಿಸುತ್ತೀರೆಂದರೆ ಏನರ್ಥ? ಅಷ್ಟಲ್ಲದೆ, ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನೂ ನೀವು ಧಿಕ್ಕರಿಸುತ್ತೀರೆಂದರೆ ನಿಮಗೆಲ್ಲಿಯ ಧೈರ್ಯ? ಎಲ್ಲಾ ರೀತಿಯಿಂದಲೂ ನೀವು ಅನಾಗರಿಕರೂ, ದುರುಳರೂ ಎಂಬುದಾಗಿ ಕಾಣುತ್ತದೆ. ನಿಮ್ಮ ದರ್ಪ ಮತ್ತು ದಾರ್ಷ್ಟ್ಯತನವನ್ನು ಕೂಡಲೇ ನಿಲ್ಲಿಸಿ.
ಕರ್ನಾಟಕ ಅಥವಾ ದೇಶದ ಎಲ್ಲೇ ಆದರೂ ನೆಲೆಸಿರುವ ಕೊಂಕಣಿ ಕ್ರೈಸ್ತರು ನಿಷ್ಠಾವಂತ ಭಾರತೀಯರೂ ಅಪ್ಪಟ ಕನ್ನಡಿಗರೂ ಆಗಿದ್ದಾರೆ. ನಾವು ಹೆಮ್ಮೆಯ ದೇಶೀಯ ಸಮುದಾಯದವರು. ನಮ್ಮ ರಾಷ್ಟ್ರಭಕ್ತಿ, ಕನ್ನಡಿಗತನ ಮತ್ತು ಧರ್ಮನಿಷ್ಠೆ ಪ್ರಶ್ನಾತೀತ. ನಿಮ್ಮಂತಹ ಗೂಂಡಾ ಮನಸ್ಥಿತಿಯವರಿಂದ ನಾವು ತಿಳಿದುಕೊಳ್ಳಬೇಕಾದುದೇನೂ ಇಲ್ಲ. ದಯವಿಟ್ಟು ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಮತ್ತು ಮಾತುಗಳನ್ನು ಹತೋಟಿಯಲ್ಲಿಡಿ. ಅನಾವಶ್ಯಕ ಸಮಸ್ಯೆ, ವೈಮನಸ್ಸು ಮತ್ತು ಅಹಿತಕರ ಸಂಗತಿಗಳನ್ನು ಸೃಷ್ಟಿಸಬೇಡಿ. ನೈಜ ಕ್ರೈಸ್ತರಾಗಿ ನಡೆದುಕೊಳ್ಳಿ.
ಸಮಗ್ರ ಕೊಂಕಣಿ ಕ್ರೈಸ್ತರ ಪರವಾಗಿ,
ಡೊನಾಲ್ಡ್ ಪಿರೇರಾ
ಸಂಪಾದಕ – ಬುಡ್ಕುಲೊ ಇ-ಪತ್ರಿಕೆ
www.Budkulo.com
ನ್ಯಾಯಾಲಯಗಳಲ್ಲಿ ಕೊಂಕಣಿ ಪೂಜೆಗೆ ಆದೇಶ – ಪ್ರಕರಣಗಳ ವರದಿಗಾಗಿ ಕೆಳಗಿನ ಲಿಂಕ್ಗಳನ್ನು ತೆರೆದು ಓದಿ 👇👇
Karnataka High Court has upheld an Appellate court order
Language Within The Purview Of Civil Law: Holds Karnataka HC
Indian court rejects bishop’s plea on Mass change
Send your Feedback to: budkuloepaper@gmail.com